ಭವ ಕಳೆವ ಶಿವ ಸತ್ಯ
ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್
ಜವರಾಯನೈತರಲು ಒಬ್ಬಂಟಿ ನಾನು
ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ
ಭವ ಕಳೆವ ಶಿವ ಸತ್ಯ ಜಾಣಮೂರ್ಖ//
ಈ ನಮ್ಮ ಬದುಕಲ್ಲಿ ಯಾವುದೂ ಚಿರವಲ್ಲ ! ಕೊನೆಗಾಲದಲ್ಲಿ ಜವರಾಯನು ನಮ್ಮಗಳ ನಡುವಣ ಬಾಂಧವ್ಯ ಎಂಥದೇ ಆಗಿರಲಿ ಕರೆದೊಯ್ವುದು ಮಾತ್ರ ಒಂಟಿಯಾಗಿಯೇ ! ಇದಂತೂ ಕಟುಸತ್ಯ. ಅವರು ನಮ್ಮವರು , ಇವರು ನಮ್ಮವರು , ನನ್ನ ಜೀವ , ನನ್ನ ಪ್ರಾಣ ಹೀಗೆಲ್ಲಾ ಹೇಳುವುದು ನಮ್ಮ ಭ್ರಮಾಧೀನ ಬದುಕಿನ ಭಾವುಕ ಮಾತುಗಳಷ್ಟೆ. ನಮ್ಮ ಬದುಕಿನಲ್ಲಿ ಕಾಣುತ್ತಿರುವುದು , ನಾವು ಮಾಡುತ್ತಿರುವುದು ಯಾವುದೂ ಚಿರವಲ್ಲ ! ಈ ಭ್ರಮಾಧೀನ ಬದುಕನ್ನು ಕಳೆದು ನೆಮ್ಮದಿಯನ್ನು ನೀಡಬಲ್ಲ ಶಿವನೊಬ್ಬನೇ ಸತ್ಯ ! ಸತ್ಯವೇ ಶಿವ ! ಸ್ವಲ್ಪ ವಿಚಾರ ಮಾಡಿ. ಕಡೆಗಿನ ನಮ್ಮ ಸ್ಥಿತಿ ಮೌನ ಅಷ್ಟೆ ! ಆಮೇಲೆ ಏನಿದ್ದರೂ ಎಲ್ಲವೂ ಅಷ್ಟೆ !