ಕಳ್ಳನೆಂತಿರಲೇನು
ಮುಳ್ಳು ತಾ ಜಗಕವನು
ಇಂದೊಂದು ಮನೆಯಾಗೆ
ನಾಳೆ ಮತ್ತೊಂದು !
ಮುಂದಿಹುದು ನಿನ್ನ ಮನೆ
ಮಂದಿಯೊಳಗೊಬ್ಬ ನೀ
ಜಾಗರದೊಳಿರು ಜಗದಿ
ಜಾಣಮೂರ್ಖ //
ಕಳ್ಳ ಹೇಗಿದ್ದರೇನು ? ಅವನು ಕಳ್ಳನೇ. ಅವನು ಸತ್ಯಸಂಧನಂತೆ ವರ್ತಿಸಬಹುದು. ಬೆಲ್ಲದ ಮಾತುಗಳನ್ನಾಡಬಹುದು. ಏನೇ ಆಗಲಿ ಜಗತ್ತಿಗೆ ಅವನೆಂದಿಗೂ ಮುಳ್ಳೇ ಅಲ್ಲವೆ? ಅವನಿಗೇನು ಇಂದೊಂದು ಮನೆಯಾದರೆ ನಾಳೆ ಮತ್ತೊಂದು. ಮರೆಯಬೇಡಯ್ಯ ಗೆಳೆಯಾ ಮುಂದೊಂದು ದಿನ ನಿನ್ನ ಮನೆಗೂ ಬಂದೇ ಬರುತ್ತಾನೆ. ನೀನೇನೇ ಆಗಿದ್ದರೂ ಅವನ ದೃಷ್ಟಿಯಲ್ಲಿ ನೀನೂ ಸಹ ಮಂದಿಯೊಳಗೊಬ್ಬನಷ್ಟೆ. ಆದ್ದರಿಂದ ಈ ಜಗತ್ತಿನಲ್ಲಿ ಬಹಳ ಜಾಗ್ರತೆಯಿಂದ ಹೆಜ್ಜೆಯಿಡಬೇಕು. ಬದುಕು ನೀರ ಮೇಲಿನ ಗುಳ್ಳೆ ! ಎಂಬ ಮಾತಿದೆಯಾದರೂ ನಿಜವಾಗಿ ನೀರ ಮೇಲಿನ ಗುಳ್ಳೆ ಯಾವುದು ಗೊತ್ತೆ ? ನಮ್ಮ ಆಯಸ್ಸು ! ಈ ಬದುಕಿಗೆ ಹುಟ್ಟೂ ಇದೆ , ಸಾವೂ ಇದೆ. ಆ ಆಯು ತೀರುವ ವರೆಗಾದರೂ ಜಾಗೃತರಾಗಿರಬೇಕಲ್ಲವೇ ? ಸ್ವಲ್ಪ ಬದುಕಿನ ಆಳಕ್ಕೆ ಇಳಿದು ಚಿಂತಿಸಿದಾಗ ಸತ್ಯವೇನೆಂಬುದು ಸ್ಪಷ್ಟವಾಗಿ ಗೋಚರಿಸಿ ಬಿಡುತ್ತದೆ. ಆಳಕ್ಕೆ ಇಳಿಯಬೇಕಷ್ಟೆ. ಇಲ್ಲದಿದ್ದರೆ ಸತ್ಯದ ಮುಖವಾಡ ಹೊತ್ತ ಜಗತ್ತು ಸತ್ಯಸಂಧವಾಗಿಯೇ ಕಾಣುತ್ತದೆ. ಕಳ್ಳರೂ ಸುಗುಣಾಭಿರಾಮರಂತೆಯೇ ಕಾಣುತ್ತಾರೆ. ಅಲ್ಲವೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021