ಒಡಲ ಚಿತ್ಕಳೆ ಬೆಳಗು
ಉಡುಗೆ ತೊಡುಗೆಗಳುಟ್ಟು ಬಹಿರಂಗ ಸಿಂಗರಿಸಿ
ಅಡಿಗಡಿಗೆ ಸಿಂಗಾರಗೊಂಡರೇನಿಹುದು ?
ಸಡಗರದಿ ಸಿಂಗರಿಸಲೇಳಂತರಂಗವನು
ಒಡಲ ಚಿತ್ಕಳೆ ಬೆಳಗಿ ಜಾಣಮೂರ್ಖ//
ಆಕರ್ಷಕ ಉಡುಗೆ ತೊಡುಗೆಗಳುಟ್ಟು ಬಹಿರಂಗವನ್ನು ಸಿಂಗರಿಸಿ ನಾವು ಅದೆಷ್ಟು ಆನಂದ ಪಡುತ್ತೇವೆ !? ಅಡಿಗಡಿಗೆ ಅದೆಂತಹಾ ಜಾಗೃತ ಸೌಂದರ್ಯಪ್ರಜ್ಞೆ ನಮ್ಮದು ! ಬಹಿರಂಗದ ಸೌಂದರ್ಯಪ್ರಜ್ಞೆ ಹೇಗೋ ಹಾಗೆಯೇ ಅಂತರಂಗದ ಸೌಂದರ್ಯ ಪ್ರಜ್ಞೆಯೂ ಅಷ್ಟೇ ಮುಖ್ಯ. ಆತ್ಮಶ್ರೀಯಿಂದ ಮೂಡುವ ಒಡಲ ಚಿತ್ಕಳೆಯದು. ದೈವೀಕವಾದದ್ದು ! ಬದುಕಿನ ಅನುಭವಗಳಿಂದ ಘನೀಭವಿಸಿದ ಅನುಭಾವದ ಅರಿವಿನ ತತ್ತ್ವ ! ಎಂದೆಂದಿಗೂ ಮಾಸದ ಶಾಶ್ವತ ಅಲಂಕಾರವದು. ಅಂತಹಾ ಅಂತರಂಗದ ಅಲಂಕಾರದ ಮುಂದೆ ಬಹಿರಂಗದ ಅಲಂಕಾರ ತೀರಾ ಕನಿಷ್ಠ ಎನಿಸಿಬಿಡುತ್ತದೆ ! ಅದರೆ ಈ ಲೌಕಿಕ ಪ್ರಪಂಚದಲ್ಲಿ ಬಾಹ್ಯ ಸೌಂದರ್ಯಕ್ಕೇ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಆಂತರಿಕ ಸೌಂದರ್ಯವು ಕಡೆಗಣಿಸಲ್ಪಡುತ್ತಿರುವುದು ವಿಪರ್ಯಾಸವೆಂದರೆ ತಪ್ಪಾಗಲಾರದು. ಇದನ್ನು ಅಂಧಕಾರ ಎನ್ನಬೇಕೋ ಕಾಲಮಹಿಮೆ ಎನ್ನಬೇಕೋ ! ಒಂದೂ ತಿಳಿಯುತ್ತಿಲ್ಲ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021