ಸುಖದೊಳೊಂದಾಗುತಲಿ
ಕಷ್ಟದೊಳು ದೂರಾಗಿ
ನಿಷ್ಠನಂದದೊಳೊಪ್ಪೆ
ಶಿಷ್ಠನಾದೀಯೇಂ ?
ಸುಖದೊಳಿರದಿರಲೇನು?
ಕಷ್ಟದೊಳಗೊಂದಾಗು
ಶ್ರೇಷ್ಟತ್ವಕಿದೆ ದಾರಿ
ಜಾಣಮೂರ್ಖ //
ಓ, ಗೆಳೆಯಾ ! ಒಬ್ಬರ ಸುಖದಲ್ಲಿ ಒಂದಾಗಿರುವುದು ದೊಡ್ಡದಲ್ಲ, ಘನವೂ ಅಲ್ಲ. ಕಷ್ಟಕಾಲದಲ್ಲಿ ಜೊತೆಯಿರುವುದಿದೆಯಲ್ಲಾ ! ಅದು ನಿಜವಾದ ಘನತೆ. ಕಷ್ಟದಲ್ಲಿ ದೂರವಿದ್ದು , ಪಲಾಯನವಾದಿಯಾಗಿ ಆಮೇಲೆ ನಿಷ್ಠನ ರೀತಿ ಮಾತನಾಡುವುದು ತರವೇ ? ಇದನ್ನು ನಿಷ್ಠತೆ ಎನ್ನಲಾದೀತೆ ? ದುರಂತವೆಂದರೆ ಇಂದು ಜಗತ್ತಿನಲ್ಲಿ ಇಂತಹವರೇ ತುಂಬಿದ್ದಾರೆ. ಬರೀ ನಿಷ್ಠತೆಯ ಮುಖವಾಡಗಳೇ ಕಾಣುತ್ತಿವೆ. ಮುಖವಾಡ ಕಳಚಿದರೆ ಬಣ್ಣ ಬಯಲಾಗುತ್ತದೆ. ಹೀಗೆ ಮುಖವಾಡ ಹಾಕಿ ಬದುಕಿದರೆ ಲೌಕಿಕ ಬದುಕಿನಲ್ಲಿ ಕ್ಷಣಿಕವೂ , ಮಿಥ್ಯವೂ ಆದ ಬಣ್ಣ ಬಣ್ಣದ ಸಾಧನೆಗಳಾಗಬಹುದೇನೋ ! ಆದರೆ ಮರೆಯದಿರು, ಮೇಲೊಬ್ಬನಿದ್ದಾನೆ ! ಅವನೆಲ್ಲವನ್ನೂ ನೋಡುತ್ತಿದ್ದಾನೆ. ಸ್ವಾರ್ಥ ಬಿಡು. ಮರೆಯದಿರು ನಿನ್ನ ಹೆಜ್ಜೆಯ ಗುರುತುಗಳನ್ನು! ಹಣಸಂಪಾದನೆಯೊಂದೇ ಗುರಿಯಲ್ಲ. ನಿನ್ನವರ ಕಷ್ಟದೊಳಗೊಂದಾಗು ಇದೇ ಶ್ರೇಷ್ಠತ್ವದ ದಾರಿ. ಸುಖದಲ್ಲಿ ಭಾಗಿಯಾಗದಿದ್ದರೂ ಚಿಂತೆಯಿಲ್ಲ. ಕಷ್ಟಕಾಲದಲ್ಲಿ ನೆರವಿಗೆ ನಿಲ್ಲಬೇಕು. ಇದು ನಿಜವಾದ ಮಾನವಧರ್ಮ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021