ಮರದ ಬದುಕು
ಹಣ್ಣೇನು ಕಾಯೇನು ಹೂವು ತಳಿರಿರಲೇನು
ಹುಣ್ಣಷ್ಟೆ ಮರಕೇನುಮುಪಯೋಗಮಿಲ್ಲ
ಮಣ್ಣಿನಿಂ ಬಂದುದನು ಮಣ್ಣ ಮಕ್ಕಳಿಗಿತ್ತು
ಕಣ್ಣಾಗುವೊಲೊ ಬದುಕು ಜಾಣಮೂರ್ಖ//
ಒಂದು ಮರದ ಬದುಕು ಹೇಗಿದೆ ನೋಡಿ ಗೆಳೆಯರೇ !? ರಸಭರಿತ ಹಣ್ಣು ಬಿಡುತ್ತೆ , ಅದರೆ ತಾನು ತಿನ್ನಲ್ಲ ! ರುಚಿಯಾದ ಕಾಯಿ ಬಿಡುತ್ತೆ , ಆದರೆ ತಾನು ಸವಿಯೋಲ್ಲ ! ಬಿಟ್ಟ ಸುಂದರ ಪುಷ್ಪಗಳು ಭಗವಂತನಿಗೋ, ತಾಯಂದಿರ ಮುಡಿಗೋ ಸೇರುತ್ತವೆ. ತಳಿರು ಯಾರದೋ ಮನೆಯ ಬಾಗಿಲನ್ನು ಬೆಳಗುತ್ತವೆ. ಹಣ್ಣಿಗಾಗಿ, ಕಾಯಿಗಾಗಿ, ಹೂವಿಗಾಗಿ ಜನರಿಂದಾಗೋ ಗಾಯವನ್ನು ಮರವು ಸಹಿಸಿಕೊಳ್ಳುವುದಷ್ಟೇ ಅಲ್ಲ , ಅದರಿಂದ ದಿವ್ಯವಾದ ಆನಂದವನ್ನು ಪಡೆಯುತ್ತದೆ. ಹಸಿದವನ ಹಸಿವನ್ನು ನೀಗಿಸಿದ ತೃಪ್ತಿ ಅದಕ್ಕಿದೆ. ಇಂತಹಾ ಸಹಕಾರ ತತ್ತ್ವದಿಂದ ಕೂಡಿದ ಬದುಕಿನ ಸಂದೇಶವನ್ನು ಸೃಷ್ಟಿಯಲ್ಲಿ ಹೆಜ್ಜೆ ಹೆಜ್ಜೆಗೆ ಕಾಣುತ್ತೇವೆ. ಇಂತಹಾ ಬದುಕು ನಮ್ಮದಾದರೆ ಜಗತ್ತು ಎಷ್ಟು ಸುಂದರ ! ಆದರ್ಶಮಯ ಅಲ್ಲವೇ ಗೆಳೆಯರೇ !? ತುಂಬಾ ಇದೆ ನಾವು ಕಲಿಯಬೇಕಾದದ್ದು. ಅಡಿಗಡಿಗೆ ಕಲಿಯಬೇಕಿದೆ. ಆದರೆ ಕಲಿಯುತ್ತಿಲ್ಲ ಅಷ್ಟೆ. ಈ ನಿಟ್ಟಿನಲ್ಲಿ ಮರದ ಬದುಕು ಒಂದು ಸುಂದರ ದೃಷ್ಟಾಂತವಷ್ಟೆ. ಇನ್ನಾದರೂ ಬದುಕಿನ ಅಂತರಾರ್ಥವನ್ನು ಅರಿತು ಕೆರೆಯ ನೀರು ಕೆರೆಗೆಂಬ ಭಾವದಲ್ಲಿ ಬದುಕೋಣವೆ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021