Write to us : Contact.kshana@gmail.com
0
(0)

ಬಾಲ್ಯದಲ್ಲಿ ಹಾಲೆಂಬುದು ನಮಗೆ ಬಂಗಾರವೇ ಆಗಿತ್ತು. ಹಬ್ಬ ಹುಣ್ಣಿಮೆಗಷ್ಟೆ ದನವಿರುವವರ ಮನೆಯಿಂದ ಹಾಲು ತರುತಿದ್ದೆವು. ದೇವರ ನೈವೇದ್ಯಕ್ಕೆ, ನಮ್ಮ ಊಟದಲ್ಲಿ ಶಾವಿಗೆಯಿದ್ದರೆ ದನದ ಹಾಲು ಅವಶ್ಯವಾಗಿ ಬೇಕಿತ್ತು. ಹೋಳಿಗೆಗೆ ಇರುವ ಬಾಳೆಹಣ್ಣನ್ನೇ ಕಿವುಚಿ, ಕಾಯಿಯಿದ್ದರೆ ಕಾಯಿಹಾಲನ್ನೇ ಸೀಕರಣೆಯಾಗಿಸಿಕೊಂಡು ಸವಿಯುತಿದ್ದೆವು. ಉಳಿದಂತೆ ಪ್ರತೀದಿನ ನಮಗೆ ಹಾಲು ಬೇಕಾಗುತಿದ್ದದ್ದು ಚಹಾ ಕಾಯಿಸಲಷ್ಟೆ. ನೀರಿಗೆ ಟೀಪುಡಿ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ಮೇಲೆರಡು ತೊಟ್ಟು ಹಾಲು ಹಾಕಿದರೆ ಅದೇ ನಮಗೆ ಅಮೃತ. ಹಾಲಿಲ್ಲದ ಕಾರಣ ಡಿಕಾಕ್ಷನ್ನನ್ನೇ ಕುಡಿದದ್ದಿದೆ. ಎಂಟಾಣೆ ರೂಪಾಯಿಗೆಲ್ಲ ದನದ ಹಾಲು ಸಿಗುವ ಕಾಲ ಹೋಗಿ ದುರ್ಭಿಕ್ಷ ದಿನಗಳು ಬಂದಾಗ ನಾವು ಬಳಸಿದ್ದು ಆಡಿನ ಹಾಲನ್ನೆ. ನಮ್ಮೂರಿನಲ್ಲಿ ಹಿಂಡು ಹಿಂಡು ಆಡುಗಳಿದ್ದವು. ಅಂಗಡಿ ಶಾಂತವ್ವರ ಮನೆಯ ಓತಗಳಂತು ಎತ್ತರಕ್ಕೆ ಹೆಸರುವಾಸಿಯಾಗಿದ್ದರೆ. ನಮ್ಮದೇ ಕೇರಿಯ ಕುರುಬರ ಮನೆಯ ಆಡುಗಳು ಹಲವರ ಮನೆಯನ್ನು ಆರ್ಥಿಕವಾಗಿ ಬೆಳಗಿದ್ದವು. ಜಾಲಿಕಾಯಿಯೆಂದರೆ ಇವಕ್ಕೆ ಎಲ್ಲಿಲ್ಲದ ಪ್ರೀತಿ. ಪ್ರತೀ ಮನೆಯ ಜಗಲಿಯಲ್ಲಿ ವೈವಿಧ್ಯಮಯ ಸೊಪ್ಪುಗಳನ್ನು ಜಗಲಿಯ ಜಂತಿಗೆ ನೇತು ಹಾಕಿದ್ದಾರೆಂದರೆ ಆ ಮನೆಯಲ್ಲಿ ಆಡು ಓತಗಳಿವೆಯೆಂದೇ ಅರ್ಥ. ನಮ್ಮ ಕುರುಬರ ಹತ್ತಾರು ಮನೆಯ ಆಡಿನ ಹಾಲು ಕುಡಿದು ಬೆಳೆದವರು ನಾವು. ಯಾವುದಾದರೂ ಆಡು ನಮ್ಮ ಹಿತ್ತಲಿಗೋ ಅಂಗಳಕ್ಕೋ ಬಂತೆಂದರೆ ಸಾಕು ನನ್ನ ತಂಗಿ ಅಥವಾ ನಮ್ಮವ್ವ ಓಡಿ ಹೋಗಿ ಅದರ ಹಿಂಗಾಲನ್ನು ಬಿರು ಬೀಸಾಗಿ ಹಿಡಿದು ಉದ್ದನೆಯ ಕಿರುಬೆರಳಿನಂಥ ಮೊಲೆಗಳುಳ್ಳ ಅದರ ಕೆಚ್ಚಲಿಗೆ ಪಟಪಟ ಬಡಿದು ಯಾವಾಗಲೋ ಸಿದ್ಧವಾಗಿಟ್ಟುಕೊಂಡ ಲೋಟವನ್ನು ತುಂಬಿಸಿಕೊಂಡು ಬಿಟ್ಟರೆ ಆ ದಿನ ನಮ್ಮ ಮನೆ ಸಮೃದ್ಧಿಯ ಕಡಲು. ದಿನವೂ ಕಟುವಾಗಿರುವ ಚಹಾ ಅಂದು ಮಂದವಾಗಿ ಗಂಟಲಿಗೆ ಹಿತವೆನಿಸುತಿತ್ತು. ಎಷ್ಟೋ ಬಾರಿ ಆಡಿನ ಹಾಲಿನಿಂದ ಮೊಸರು ಮಾಡಿದ್ದೂ ಉಂಟು.

ನಮ್ಮದೇ ಕೇರಿಯ ಮಣಚಿಕ್ಕಾಣ್ಣರ ಸಿದ್ದಜ್ಜಿ ಮನೆಯಲ್ಲಿ ಹತ್ತಾರು ಆಡುಗಳಿದ್ದವು. ನಮ್ಮ ಬಾಲ್ಯಜೀವನದ ಅರ್ಧದಷ್ಟು ಕಾಲ ನಮಗೆ ಹಾಲು ನೀಡಿದ ತಾಯಿ ಸಿದ್ದಜ್ಜಿ. ಎಂಟಾಣೆಗೆ ಶುರುವಾದ ವ್ಯವಹಾರ ಎರಡು ರೂಪಾಯಿಗೆ ಏರುವವರೆಗೂ ನಾವು ಸಿದ್ದಜ್ಜಿಯ ಬಳಿ ಹಾಲು ಪಡೆದಿದ್ದೆವು. ಎಷ್ಟೋ ಬಾರಿ ನಮ್ಮ ಲೋಟವನ್ನೇ ಹಿಡಿದು ಅದಾಗ ತಾನೇ ಎದುರಲ್ಲೇ ಕರೆದುಕೊಡುತಿದ್ದ ನೊರೆಹಾಲು ನಮ್ಮ ಪುಟ್ಟ ಕೈಗಳಿಗೆ ಹಿತವೆನಿಸುತಿತ್ತು. ಮನೆಗೆ ಯಾರಾದರೂ ನೆಂಟರು ಬಂದಾಗ ಆಡಿನ ಹಾಲಿನ ಚಹಾ ಅವರಿಗೆ ಇರಿಸುಮುರಿಸಾಗಬಹುದೆನಿಸಿ ದನ, ಎಮ್ಮೆಯ ಹಾಲಿಗೆ ಇಡೀ ಊರನ್ನೇ ತಿರುಗಾಡಿ ಕೊನೆಗೆ ಸಿಗದಿದ್ದಾಗ ಅವರಿಗೆ ತಿಳಿಯದಂತೆ ಆಡಿನ ಹಾಲಿನ ಚಹಾವನ್ನೇ ನೀಡಿದ್ದುಂಟು. ನಮಗಂತು ಆಡಿನ ಹಾಲಿನ ಚಹಾ ಬಹು ರುಚಿಕರವಾಗಿತ್ತು. ಸೋಮಿನಕೊಪ್ಪದ ಮಂಜು ದೊಡ್ಡವ್ವರ ಮಟ್ಟಿ ಹೊಲಕ್ಕೆ ಹೋದಾಗೊಮ್ಮೆ ಕಾಡು ಮೇಯಲು ಬಂದ ಆಡುಗಳ ಹಿಂಡಲ್ಲಿ ಒಂದು ಆಡನ್ನು ಹಿಡಿದು ಚೊಂಬಿನಷ್ಟು ಹಾಲನ್ನು ನಮ್ಮ ಗಿರಿಯಕ್ಕ ಕರೆದುಕೊಟ್ಟಾಗ ಯಾವ ಮುಜುಗರವೂ ಇಲ್ಲದೆ ಬೆಚ್ಚನೆಯ ನೊರೆಹಾಲನ್ನು ಒಂದೇ ಗುಟುಕಿಗೆ ಕುಡಿದಿದ್ದೆ. ಹೀಗೆ ಆಡೂ ಕೂಡ ನಮಗೆ ಗೋಮಾತೆಯಾಗಿತ್ತು.

ದನಗಳನ್ನು ಸಾಕಿಕೊಳ್ಳುವಷ್ಟು ಅನುಕೂಲವಿಲ್ಲದ್ದರಿಂದ ಕನಿಷ್ಟ ಆಡನ್ನಾದರೂ ಸಾಕಿಕೊಳ್ಳೋಣವೆಂದು ಅವ್ವ ಒಂದು ಆಡನ್ನು ಖರೀದಿಸಿದ್ದಳು. ಅದೆಷ್ಟು ಜತನದಿಂದ ಅದನ್ನು ಸಾಕಿದ್ದೆವೆಂದರೆ ನಮ್ಮ ಅತಿಯಾದ ನಾಜೂಕು ಅದಕ್ಕೇ ಮುಜುಗರವೆನಿಸಿತ್ತೆನಿಸುತ್ತದೆ. ನನಗೂ ನನ್ನ ತಂಗಿಗೂ ಅದು ಬೇಗ ಮರಿ ಹಾಕಲೆಂಬುದೇ ಹೆಬ್ಬಯಕೆ. ಹೀಗೆ ಪ್ರೀತಿಯಿಂದ ಸಾಕಿದ ಆಡು ಆರಂಭಿಕ ಗರ್ಭಿಣಿಯಿದ್ದ ಸಮಯ ಕತ್ತಲಲ್ಲಿ ಮನೆಯ ಕಟಾಂಜನದಲ್ಲಿಟ್ಟಿದ್ದ ಕೆಟ್ಟಗಾಳನ್ನು ತಿಂದು ಎಳಸು ಭ್ರೂಣವನ್ನೇ ಹೊರಹಾಕಿ ನಿರಾಸೆ ಮೂಡಿಸಿತ್ತು. ಅದೂ ಸಾಯುವುದೆಂಬ ಮಾದರ ದುಂಡ್ಯಣ್ಣನ ಮಾಹಿತಿ ಮೇರೆಗೆ ಸಿಕ್ಕ ಕನಿಷ್ಟ ಬೆಲೆಗೆ ಮಾರಿ ಬಿಟ್ಟೆವು. ಮತ್ತೆ ಅವರಿವರ ಮನೆಯಿಂದ ಹಾಲು ತರುವುದೇ ನಮ್ಮ ಮುಂಜಾನೆಯ ನಿತ್ಯ ಕಾಯಕವಾಯಿತು. ಇದನ್ನೆಲ್ಲ ಕೇಳಿ ನೋಡಿ ಮನಕರಗಿದ್ದ ನಮ್ಮ ಭೈರನಹಳ್ಳಿ ದೊಡ್ಡಮ್ಮನಿಂದ ಬಳುವಳಿಯಾಗಿ ಬರಲು ಜಾನಕಿ ಕಾದಿದ್ದಳು! ಆಗದು ವಿನೋದ ದೊಡ್ಡಮ್ಮನ ಮನೆಯಲ್ಲಿ ಸೊಂಪಾಗಿತ್ತು!!

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅರಬಗಟ್ಟೆ ಅಣ್ಣಪ್ಪ
Latest posts by ಅರಬಗಟ್ಟೆ ಅಣ್ಣಪ್ಪ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಬಿಟ್ಟು ನೋವ್ಪಿಡಿ ಸುಖವ